ಗಢಮುಕ್ತೇಶ್ವರ-
ಉತ್ತರಪ್ರದೇಶದ ಮೀರತ್ ಜಿಲ್ಲೆಗೆ ಸೇರಿದ ಒಂದು ಪುರಾತನ ತೀರ್ಥಕ್ಷೇತ್ರ. ಮಹಾಭಾರತ ಕಾಲದ ಹಸ್ತಿನಾಪುರದ ಒಂದು ಭಾಗವಾಗಿತ್ತೆಂದು ಸ್ಥಳಪುರಾಣ.  ಈಗ ಇದರಿಂದ 25 ಮೈ. ದೂರದ ಪ್ರದೇಶವೊಂದನ್ನು ಹಸ್ತಿನಾಪುರವಿದ್ದ ಸ್ಥಳವೆಂದು ಗುರುತಿಸುತ್ತಾರೆ. ಅಗಸ್ತ್ಯ ಋಷಿಯ ಶಾಪದಿಂದ ಸರ್ಪವಾದ ನಹುಷ ಧರ್ಮರಾಯನಿಂದ ಶಾಪವಿಮುಖನಾದ್ದು ಇಲ್ಲಿಯೇ ಎಂದು ಮಹಾಭಾರತದ ಉಲ್ಲೇಖ. ಇಲ್ಲಿ ಮಹಾದೇವನ ಏಳು ದೇವಸ್ಥಾನಗಳಿವೆ: ಗಣ ಮುಕ್ತೇಶ್ವರನಾಥ, ಕೇದಾರನಾಥ, ಗಂಗೇಶ್ವರನಾಥ, ಭೂತೇಶ್ವರನಾಥ, ಅಮಲೀಶ್ವರನಾಥ, ಮುಕ್ತೇಶ್ವರನಾಥ, ಮತ್ತು ಮುಕ್ತಿನಾಥ. ಇವುಗಳಲ್ಲಿ ಗಣಮುಕ್ತೇಶ್ವರ ದೇವಾಲಯವೇ ಪ್ರಧಾನವಾದದ್ದು. ಪ್ರದೇಶದ ಅರಾಧ್ಯದೇವತೆ ಗಂಗಾದೇವಿಯಾದ್ದರಿಂದ ಇಲ್ಲಿ ಆಕೆಯ ನಾಲ್ಕು ಪೂಜಾ ಮಂದಿರಗಳಿವೆ. ಇಲ್ಲಿ ಅನೇಕ ತೀರ್ಥಗಳೂ ಇವೆ. ಕಾರ್ತಿಕ ಪೌರ್ಣಮಿಯಂದು ಇಲ್ಲಿ ವಿಶೇಷ ಉತ್ಸವ ನಡೆಯುತ್ತದೆ. ಸಹಗಮನಮಾಡಿದ ಸಾಧ್ವಿಯರ 80ಕ್ಕೂ ಹೆಚ್ಚು ಮಾಸ್ತಿಕಲ್ಲುಗಳು ಗಢಮುಕ್ತೆಶ್ವರದ್ಲಲಿವೆ. ಹದಿಮೂರನೆಯ ಶತಮಾನದಲ್ಲಿ ಗಿಯಾಸುದ್ದೀನ್ ಬಲ್ಬನ್ ಕಟ್ಟಿಸಿದ ಒಂದು ಮಸೀದಿ ಇಲ್ಲಿದೆ. ಇಂದು ಗಢಮುಕ್ತೇಶ್ವರ ಮರಮುಟ್ಟುಗಳ, ಬೊಂಬುಗಳ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಜನಸಂಖ್ಯೆ  10,940 (1971).     						         (ಬಿ.ಎಸ್.ಎಚ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ